ರಾಜಸ್ಥಾನದಲ್ಲಿ ಬಿಜೆಪಿಗೆ ಮೊದಲ ತ್ರಿವಳಿ ತಲಾಕ್: ಶತ್ರುಘ್ನ ಸಿನ್ಹಾ ವ್ಯಂಗ್ಯ !
ರಾಜಸ್ಥಾನದಲ್ಲಿ ಬಿಜೆಪಿಗೆ ಮೊದಲ ತ್ರಿವಳಿ ತಲಾಕ್: ಶತ್ರುಘ್ನ ಸಿನ್ಹಾ ವ್ಯಂಗ್ಯ !
ಬ್ರೇಕಿಂಗ್ ನ್ಯೂಸ್, ಕರ್ನಾಟಕ ವರದಿ
ಫೆ : 03- ಶನಿವಾರ,
ಬಿಜೆಪಿಗೆ ಮೊದಲು ತ್ರಿವಳಿ ತಲಾಕ್ ನೀಡಿದ ರಾಜ್ಯ ರಾಜಸ್ಥಾನ ಎಂದು ಬಿಹಾರದ ಪಟ್ನಾ ಸಾಹೇಬ್ ಕ್ಷೇತ್ರದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ವ್ಯಂಗ್ಯವಾಡಿದ್ದಾರೆ.
ರಾಜಸ್ಥಾನದ ಒಂದು ವಿಧಾನಸಭಾ ಕ್ಷೇತ್ರ ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣಾ ಫಲಿತಾಂಶ ಗುರುವಾರ ಪ್ರಕಟಗೊಂಡಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಸಿನ್ಹಾ, ‘ಆಡಳಿತಾರೂಢ ಪಕ್ಷಕ್ಕೆ ಹಾನಿಕಾರಕ ಫಲಿತಾಂಶದ ಬ್ರೇಕಿಂಗ್ ಸುದ್ದಿ, ರಾಜಸ್ಥಾನದಲ್ಲಿ ಬಿಜೆಪಿಗೆ ಮೊದಲ ತ್ರಿವಳಿ ತಲಾಕ್. ತಲಾಕ್ ಅಜ್ಮೀರ್, ತಲಾಕ್ ಅಲ್ವಾರ್, ತಲಾಕ್ ಮಂಡಲಗಡ. ತಲಾಕ್’ ಎಂದು ಬರೆದಿದ್ದಾರೆ.
‘ನಮ್ಮ ಪ್ರತಿಸ್ಪರ್ಧಿಗಳು ದಾಖಲೆ ಅಂತರದಿಂದ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ’ ಎಂದೂ ಸಿನ್ಹಾ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ರಾಜಸ್ಥಾನದ ಸೋಲಿಗೆ ಸಂಬಂಧಿಸಿ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ ಸಿನ್ಹಾ. ಇವರು ಕಳೆದ ಒಂದು ವರ್ಷದಲ್ಲಿ ಹಲವು ಬಾರಿ ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಸ್ಥಾಪಿಸಿರುವ ‘ರಾಷ್ಟ್ರೀಯ ಮಂಚ್’ಗೆ ಶತ್ರುಘ್ನ ಸಿನ್ಹಾ ಗುರುವಾರವಷ್ಟೇ ಸೇರಿದ್ದಾರೆ.
Comments
Post a Comment